Slide
Slide
Slide
previous arrow
next arrow

ಆಯುರ್ವೇದ ದೈನಂದಿನ ಬದುಕಿನ ಭಾಗವಾಗಲಿ: ಜಯಲಕ್ಷ್ಮಿ ರಾಯಕೋಡ್

300x250 AD

ಕಾರವಾರ: ಆಯುರ್ವೇದ ಪದ್ದತಿಯು ಇಡೀ ಪ್ರಪಂಚಕ್ಕೆ ಭಾರತ ನೀಡಿರುವ ಅತ್ಯಮೂಲ್ಯ ಕೊಡುಗೆಯಾಗಿದ್ದು, ಆಯುರ್ವೇದದಲ್ಲಿನ ಜೀವನ ವಿಧಾನವು ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗಲಿದ್ದು, ಆಯುಷ್ ಪದ್ದತಿಯನ್ನು ಪ್ರತಿಯೊಬ್ಬ ಸಾರ್ವಜನಿಕರೂ ದಿನನಿತ್ಯದ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಾರವಾರ ಉಪ ವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ್ ಹೇಳಿದರು.

ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಶಾಖೆ, ನಗರಸಭೆ ಕಾರವಾರ ಹಾಗೂ ಸ್ಥಳೀಯ ಸಂಘ-ಸ0ಸ್ಥೆಗಳ ಸಹಯೋಗದೊಂದಿಗೆ , ಸರಕಾರಿ ನೌಕರರ ಭವನದಲ್ಲಿ ನಡೆದ ಆಯುಷ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತದ ಆಯುರ್ವೇದ ಪದ್ದತಿಯು ಭಾರತಕ್ಕಿಂತಲೂ ವಿದೇಶಗಳಲ್ಲಿ ಹೆಚ್ಚು ಪ್ರಸಿದ್ದಿ ಪಡೆದಿದೆ. ಕೋವಿಡ್ ಸಂದರ್ಭದಲ್ಲಿ ಆಯುರ್ವೇದ ಮಹತ್ವ ಇಡೀ ವಿಶ್ವಕ್ಕೆ ತಿಳಿಸಿದೆ. ಹಿಂದೆ ನಮ್ಮ ಹಿರಿಯರು ಮನೆಗಳಲ್ಲಿ ಆಯುರ್ವೇದದ ಅಂಶಗಳಿರುವ ಆಹಾರ ಪದಾರ್ಥಗಳನ್ನು ಬಳಸುವ ಮೂಲಕ ಆರೋಗ್ಯಂತರಾಗಿ ಮತ್ತು ದೀರ್ಘಾಯುಷಿಗಳಾಗಿ ಬದುಕುತ್ತಿದ್ದು, ಕ್ರಮೇಣ ಪಾಶ್ವಾತ್ಯ ಸಂಸ್ಕೃತಿಯ ಕಾರಣದಿಂದ ನಮ್ಮಲ್ಲಿ ಆಯುರ್ವೇದದ ಬಳಕೆ ಕಡಿಮೆಯಾಗಿದೆ ಎಂದರು.

 ಆಯುರ್ವೇದವು ಔಷಧ ಪದ್ದತಿ ಮಾತ್ರವಲ್ಲದೆ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಆರೋಗ್ಯಕರ ಜೀವನ ಶೈಲಿಯಾಗಿದೆ. ಇದರಲ್ಲಿ ಸೂಕ್ತ ಆಹಾರ ಸೇವನೆ, ಜೀವನ ವಿಧಾನ, ಒತ್ತಡರಹಿತ ಜೀವನ ವಿಧಾನ ಎಲ್ಲವನ್ನೂ ಒಳಗೊಂಡಿದ್ದು, ಇದು ಇಂದಿನ ಯುವಜನತೆ ಅತ್ಯಗತ್ಯವಾಗಿ ಅಳವಡಿಸಿಕೊಳ್ಳಬೇಕಾದ ಜೀವನ ವಿಧಾನವಾಗಿದೆ. ಕುಟುಂಬಗಳಲ್ಲಿರುವ ಹಿರಿಯ ವ್ಯಕ್ತಿಗಳು ತಮ್ಮ ಮಕ್ಕಳಿಗೆ ಆಯುರ್ವೇದದ ಮಹತ್ವದ ಬಗ್ಗೆ ತಿಳಿಸಿ, ಅದನ್ನು ಅಳವಡಿಸಿಕೊಳ್ಳುವಂತೆ ತಿಳಿಸಬೇಕು ಎಂದರು.

ರೈತರು ತಮ್ಮ ಜಮೀನುಗಳಲ್ಲಿ ಬೆಳೆಗಳ ಮಧ್ಯದಲ್ಲಿ ತಮ್ಮ ಮನೆಯ ಉಪಯೋಗಕ್ಕಾದರೂ ಅಗತ್ಯ ಇರುವಷ್ಟು ಔಷಧಿಯ ಸಸ್ಯಗಳು ಮತ್ತು ಆಯುರ್ವೇದ ಗುಣ ಹೊಂದಿರುವ ನಿತ್ಯ ಬಳಕೆಯ ತರಕಾರಿಗಳನ್ನು ಬೆಳೆಯಬೇಕು. ಎಲ್ಲಾ ಮನೆಗಳಲ್ಲೂ ಅಂಗಳದಲ್ಲಿ ಸಾಧ್ಯವಿದಷ್ಟು ಔಷಧಿಯ ಸಸ್ಯಗಳನ್ನು ಬೆಳೆಸಿ ಅವುಗಳನ್ನು ಉಪಯೋಗಿಸಬೇಕು. ಉತ್ತರಕನ್ನಡ ಜಿಲ್ಲೆಯು ಆಯುರ್ವೇದ ಸಸ್ಯಗಳ ಸಿರಿ ನೆಲವಾಗಿದೆ, ಇಲ್ಲಿರುವ ಆಯುರ್ವೇದ ಸಸ್ಯಗಳ ಪ್ರಯೋಜನವನ್ನು ಜಿಲ್ಲೆಯ ಜನತೆ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ತಿಳಿಸಿದರು.

300x250 AD

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಆಯುಷ್ ಇಲಾಖೆಯ ಜಿಲ್ಲಾ ನೊಡಲ್ ಅಧಿಕಾರಿ ಹಾಗೂ ವೈದ್ಯಾಧಿಕಾರಿ ಡಾ.ಜಗದೀಶ ಯಾಜಿ, ಧನ್ವಂತರಿ ಜಯಂತಿ ಅಂಗವಾಗಿ 2016 ರಿಂದ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಆಚರಿಸುತ್ತಿದ್ದು, ಈ ವರ್ಷ ‘ಪ್ರತೀ ದಿನ ಪ್ರತಿ ಮನೆಯಲ್ಲಿ ಆಯುರ್ವೇದ’ ಎಂಬ ಘೋಷ ವಾಕ್ಯದೊಂದಿಗೆ ಆಚರಣೆ ಮಾಡುತ್ತಿದ್ದು, ವಿದ್ಯಾರ್ಥಿಗಳಿಗೆ ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳುವ ಕುರಿತಂತೆ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಅರಿವು ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಸಾರ್ವಜನಿಕರಿಗೆ ಆಯುಷ್ ಚಿಕಿತ್ಸಾ ಶಿಬಿರಗಳನ್ನು ಹಾಗೂ ಕೃಷಿಕರಿಗೆ ತಮ್ಮ ಬೆಳೆಗಳ ಮಧ್ಯೆ ಆಯುರ್ವೇದದ ಔಷಧಿಯ ಗಿಡಗಳನ್ನು ಉಪ ಬೆಳೆಯಾಗಿ ಬೆಳೆದು ಆರ್ಥಿಕ ಲಾಭ ಪಡೆಯುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಜನ ಸಂದೇಶ, ಜನಾಂದೋಲನ, ಜನರ ಸಹಭಾಗಿತ್ವದಲ್ಲಿ ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ಆಚರಣೆ ಮಾಡಲಾಗುತ್ತಿದೆ ಎಂದರು.

ಔಷಧಿಯ ಸಸ್ಯಗಳ ಪ್ರಾತ್ಯಕ್ಷಿಕೆ ಮತ್ತು ತಜ್ಞ ಆಯುರ್ವೇದ ವೈದ್ಯರಿಂದ ಆಯುರ್ವೇದದ ವಿವಿಧ ವಿಷಯಗಳು ಮತ್ತು ಚಿಕಿತ್ಸಾ ಪದ್ದತಿಯ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಸತೀಶ್ ಪವಾರ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಅನ್ನಪೂರ್ಣ ವಸ್ತ್ರದ್, ತಾಲೂಕು ಆರೋಗ್ಯಾಧಿಕಾರಿ ಡಾ. ಸೂರಜ್ ನಾಯಕ್, ಆರ್.ಸಿ.ಹೆಚ್. ಅಧಿಕಾರಿ ಡಾ.ಹರ್ಷ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಲಲಿತಾ ಸ್ವಾಗತಿಸಿದರು. ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಂಜಿವ್ ಕುಮಾರ್ ನಾಯ್ಕ ವಂದಿಸಿದರು.

Share This
300x250 AD
300x250 AD
300x250 AD
Back to top